ಸಂಬಳ ಸಿಕ್ಕ ತಿಂಗಳ ಮೊದಲ ವಾರದಲ್ಲಿ ಒಂದಷ್ಟು ಪುಸ್ತಕಗಳನ್ನ ಕೊಳ್ಳುವುದು ಕಳೆದ ಐದಾರು ತಿಂಗಳಿಂದ ಆಚರಿಸಿಕೊಂಡು ಬಂದ ರೂಢಿ. ಕಳೆದ ತಿಂಗಳ ಮೊವತ್ತನೆ ತಾರೀಕೆ ಸಂಬಳ, ಗರಿ ಗರಿಯ ನೋಟುಗಳು ಜೇಬಿನಲ್ಲಿ ನಳನಳಿಸುತ್ತಿದ್ದವು. ಮತ್ತೆ ಮನಸ್ಸು ಹೇಗೆ ನಿಂತಾತು, ಕುಡುಕ ಸಾರಾಯಿ ಅಂಗಡಿ ಕಂಡೊಡನೆ ಲೋಕವ ಮರೆವಂತೆ ಮನೆಯ ಪಕ್ಕದಲ್ಲೆ ಇರುವ ಸಪ್ನ ಬುಕ್ ಹೌಸ್ ಕೈ ಬೀಸಿ ಕರೆದಿತ್ತು. ನೇರ ಮೂರನೆ ಮಹಡಿಯ ಪುಸ್ತಕಗಳಲ್ಲಿ ಕಳೆದು ಹೋಗಲು ಸಮಯ ಹಿಡಿಯಲಿಲ್ಲ, ಅರ್ಧ ಮುಕ್ಕಾಲು ಗಂಟೆ ಪೇರಿಸಿಟ್ಟ ಪುಸ್ತಕಗಳಲಿ ಚಂದದ ಶಿರ್ಷಿಕೆಯವನ್ನು ತೆಗೆದು ಮುಖಪುಟ ಗಮನಿಸಿ ಲೇಖಕ ಯಾರು? ಯಾರು ಮುನ್ನುಡಿ ಬರೆದಿದ್ದಾರೆ? ಅಂತೆಲ್ಲ ಗಮನಿಸಿ ಮತ್ತೆ ಅದೆ ಜಾಗದಲ್ಲಿ ಇಡುವುದು. ಮೊದಲೆ ಇಂಥ ಪುಸ್ತಕ ಕೋಳ್ಳಬೇಕು ಎಂದು ನಿರ್ಧರಿಸಿದ್ದರೆ ಕೆಲಸ ಸುಲಭ, ಆದರೆ ನಾನು ಸಾಮಾನ್ಯವಾಗಿ ಅಲ್ಲಿ ಹೋಗಿ ನೋಡಿ ಕೊಂಡವೆ ಹೆಚ್ಚು.
ಈ ಬಾರಿ ಹೊದಾಗ ಮೊದಲು ಕಣ್ಣಿಗೆ ಬಿದ್ದದು ಎಸ್ ಎಲ್ ಭೈರಪ್ಪನವರ “ದಾಟು”, ದಾಟು ಈ ಮೊದಲೆ ಓದಿದ್ದರಿಂದ ಹೊಸ ಪುಸ್ತಕದ ಹುಡುಕಾಟದಲ್ಲಿದ್ದಾಗ ಸಿಕ್ಕಿದ್ದು ಕುವೆಂಪು ಅವರ “ಮಲೆಗಳಲ್ಲಿ ಮದು ಮಗಳು”, ಮಲೆನಾಡ ಬದುಕಿನ ಬಗ್ಗೆ ತಿಳಿಯುವ ಕುತೂಹದಿಂದ ಅದನ್ನೆತ್ತಿಟ್ಟುಕೊಂಡೆ. ಮಧ್ಯದ ದೊಡ್ಡ ಸಾಲಿನಲ್ಲಿ ಪೇರಿಸಿಟ್ಟಿದ್ದ ಕಥಾ ಸಂಕಲನಗಳಲ್ಲಿ ಕೈಯಾಡಿಸಿ ಛಂದ ಪುಸ್ತಕ ಪ್ರಕಾಶನದ “ಪುಟ್ಟ ಪಾದದ ಗುರುತು” ಸಿಕ್ಕಿತು ಲೇಖಕಿಯ ಹೆಸರು ಅಪರಿಚಿತವಾಗೆ ಇತ್ತು ಸುನಂದ ಪ್ರಕಾಶ ಕಡಮೆ, ಮುನ್ನುಡಿಯಲ್ಲಿ ಜಯಂತ ಕಾಯ್ಕಿಯವರ ಮೊಹಕ ಸಾಲುಗಳು, ಕೇವಲ ೪೦ ರೂಗಳ ಚಂದದ ಮುಖಪುಟದ ಪುಸ್ತಕವನ್ನ ಕೊಳ್ಳದೆ ಇರುವುದಾದರು ಹೇಗೆ?
“ಪುಟ್ಟ ಪಾದದ ಗುರುತು” ಸುನಂದ ಪ್ರಕಾಶ ಕಡಮೆ ಅವರ ಚೊಚ್ಚಲ ಪುಸ್ತಕ ಮತ್ತು ಮೊದಲ ಕಥಾ ಸಂಕಲ ಕೂಡ, ನನಗೆ ತಿಳಿದ ಮಟ್ಟಿಗೆ. ಕೃತಿ ಮೊದಲನೆಯದಾದರು ಬರಹದ ಹಂದರ ಆಳವಾಗಿದೆ, ಬದುಕಿನ ಸೂಕ್ಷ್ಮ ವಿವರಳನ್ನ ಓಳಗೊಂಡ ಕಥೆಗಳು ನಮ್ಮ ಸುತ್ತ ಮುತ್ತ ಜರುಗುತ್ತಿರುವ ಅನುಭವವನ್ನ ಓದುಗನಲ್ಲಿ ಮೂಡಿಸುತ್ತವೆ. ಒಬ್ಬ ಆಪ್ತ ಮಿತ್ರನೊಡನೆ ಸರಾಗವಾಗಿ ಎಗ್ಗಿಲ್ಲದೆ ಮಾತನಾಡು ಪರಿಯಲ್ಲಿ ಕಥೆಗಳ ಹರಿವು ಕೊನೆಯ ತನಕ ತಣಿಸುವುದು. ಒಟ್ಟು ಹತ್ತು ಕಥೆಗಳಿದ್ದು, ಕೆಲವು ಕಥೆಗಳು ಈ ಮೊದಲು ವಿಜಯ ಕರ್ನಾಟಕ, ಉದಯವಾಣಿ ಇನ್ನು ಹಲವಾರು ಪತ್ರಿಕೆಗಳ ಕಥಾ ಸ್ಪರ್ಧೆಯಲ್ಲಿ ಬಹುಮಾನ ಪಡೆದ ಕೃತಿಗಳೆ.
ಜಯಂತ ಕಾಯ್ಕಿಣಿಯವರ ಮುನ್ನುಡಿಯ ಸಾಲುಗಳು ಹೀಗೆ ಸಾಗುತ್ತವೆ…
ಸುನಂದಾರ ಸುಟಿಯಾದ ಕತೆಗಳು ರಭಸದಿಂದ ಹುಸಿದು ಹೋಗುತ್ತಿರುವ ಇಂದಿನ ನಮ್ಮ ಎಳೆ ಬಿಡಾರಗಳ ಸಾಂಸಾರಿಕ ಲಯವನ್ನು ಮತ್ತು ಅದನ್ನು ಪುಟ್ಟ ಸರಳ ಸಹಜ ದೈನಿಕದ ಎಳೆಗಳ ಮೂಲಕ ಮತ್ತೆ ಕಟ್ಟಲು ಯತ್ನಿಸುವ ಇಂದಿನ ಹೊಸ ತಾಯಿಯ ನಿತ್ಯದ ಸ್ಪೂರ್ತಿಯಲ್ಲು ಆಶ್ಚರ್ಯ ಹುಟ್ಟಿಸುವಂಥ ಪಕ್ವತೆಯಲ್ಲಿ ಮೃದುವಾಗಿ ಚಿತ್ರಿಸುತ್ತಿವೆ. ಆಳವಾದ ತಾಯ್ತನ ಮತ್ತು ಹದಿಹರೆಯದ ಕಣ್ಣಿನ ಫಳಫಳ ಚೈತನ್ಯ ಇವುಗಳ ಅಪರೂಪದ ಸಂಗಮದಲ್ಲಿ ಅಪಸ್ವರವಿಲ್ಲದೆ ಅರಳಿರುವ ಸುನಂದಾರ ಪ್ರಾಮಾಣಿಕ ಕತೆಗಳು ನಮ್ಮ ಬದುಕಿನ ಗುಣವನ್ನು ಆಪ್ತವಾಗಿ ಹೆಚ್ಚಿಸುತ್ತವೆ.
-ಜಯಂತ ಕಾಯ್ಕಿಣಿ
ಶ್ವಾಪುರದ ಜಾಧವ ಬಿಲ್ಡಿಂಗಿನ ದತ್ತೂ ಮಾಮನ ಮನೆಯಿಂದ ಹೊರಬಿದ್ದ ಸಂದೀಪ, ಎಸ್ಕೆ ಕಾಂಪ್ಲೆಕ್ಸ್ ಬಳಿ ಸಿಬಿಟಿ ಬಸ್ಸು ಹತ್ತಿ, ಕೋರ್ಟಿನ ಸರ್ಕಲ್ಲಿನಲ್ಲಿಳಿದಾಗ ಆಗಲೇ ಬೆಳಗಿನ ಒಂಬತ್ತೂವರೆ. ಪುಷ್ಪಾ ಮಾಮಿ ಚಹ ಕುಡಿಯಲು ಕೂತಾಗ ನಮ್ಮ ಪ್ರೀತಿಯ ಮೊದಲ ಹುಟ್ಟುಹಬ್ಬಕ್ಕೆ ನಿನ್ನ ಅಪ್ಪ ತೆಗೆಸಿಕೊಟ್ಟದ್ದಿದು ಎಂದು ಇಡ್ಲಿಪಾತ್ರೆ ತೋರಿಸುತ್ತ ಅಕ್ಕರೆಯಿಂದ ಒಂದೆರಡು ಇಡ್ಲಿ ಹೆಚ್ಚೇ ಬಡಿಸಿದ್ದು ಬಸ್ಸು ಹತ್ತಿದ ಕೂಡಲೇ ತೂಕಡಿಕೆ ತಂದುಬಿಟ್ಟಿತ್ತು. ದುರ್ಗದ ಬೈಲಿನಲ್ಲಿ ಪ್ರೀತಿ ಫೈನಾನ್ಸ್ ನಡೆಸುತ್ತ ಸದಾ ಸಫಾರಿ ಡ್ರೆಸ್ಸನ್ನೇ ತೊಡುತ್ತಿದ್ದ ದತ್ತೂ ಮಾಮ ಆಫೀಸಿಗೆ ತೆರಳುತ್ತಿ. ಮುಂದೆ ಓದಿ…

ತುಂಬಾ ತುಂಬಾ ಥ್ಯಾಂಕ್ಸ್, ’ಪುಟ್ಟಪಾದದ ಗುರುತು’ ಓದ್ಬೇಕು ಅಂತ ಲಿಸ್ಟಿಗೆ ಯಾವತ್ತೋ ಹಾಕಿ ಮರೆತಿದ್ದೆ.. ದೇಶಕಾಲದ ಕಳೆದ ಸಂಚಿಕೆಯಲ್ಲಿ ಸುನಂದಾರ ಬರಹ ಓದಿದಾಗ ಮತ್ತೆ ಅವ್ರು ಬರೆದದ್ದು ಓದಬೇಕು ಅಂದುಕೊಂಡಿದ್ರೂ ಇಲ್ಲಿ ಪುಸ್ತಕದ ಪರಿಚಯ, ಕಥೆಯ ತುಣುಕು ನೋಡಿದಮೇಲೆ ಓದ್ಲೇಬೇಕು ಅನ್ನಿಸಿಬಿಡ್ತು! ಹಾಂ ’ಗೆಳತಿ’ಯ ಲಿಂಕಿಗೂ ಇನ್ನೊಂದು ದೊಡ್ಡ್ಡ್ ಥ್ಯಾಂಕ್ಸ್:) ಹೀಗೇ ತಿಂಗಳ ಪುಸ್ತಕಗಳನ್ನೆಲ್ಲಾ ಪರಿಚಯಿಸ್ತಿರಿ:)
ಅಂದ ಹಾಗೆ ಗೆಳತಿ ಲಿಂಕ್ ನನ್ಗು “ಪುಟ್ಟ ಪಾದದ ಗುರುತು” ಪುಸ್ತಕದ ಬಗ್ಗೆ ಹುಡುಕಾಟದಲ್ಲಿದಾಗಲೆ ಸಿಕ್ಕಿದು.
-ಅಮರ