14
Apr
08

ಪಾಕಕ್ರಾಂತಿ ಮತ್ತು ತೇಜಸ್ವಿ.

ನಮ್ಮ ಹುಡುಗ ಶ್ರೀನಿಧಿ ಕಸ್ತೂರಿ ವಾಹಿನಿಯ ಪಾಲಾದ ಮೇಲೆ, ಅವನಿಂದ ಬರುತ್ತಿದ್ದ ಮೆಸೇಜುಗಳೆಲ್ಲ ಬ್ರೇಕಿಂಗ್ ನ್ಯೂಸುಗಳೆ. ಕುಮಾರಣ್ಣನ ರಾಜಿನಾಮೆ, ಯಡ್ಡಿಯ ಪ್ರಮಾಣವಚನ, ಗೌಡರ ಗದ್ದಲ ಹೀಗೆ ಸಾಗಿತ್ತು ಮೆಸೇಜುಗಳ ಹಾವಳಿ. ಮೊನ್ನೆ ಶುಕ್ರವಾರ ಮೊಬೈಲ್ ಸುದ್ದಿ ಪೆಟ್ಟಿಗೆಯಲ್ಲಿ ಬಂದು ಕುಳಿತಿದ್ದ ಸುದ್ದಿ ಓದಿ ಅರೆ ತೇಜಸ್ವಿ ಹೊಸ ಪುಸ್ತಕ ಬಂದಿದೆ ಅಂಕಿತದಲ್ಲಿ ತೊಗೊಂಡೆ ಎಂದು ಬರೆದಿದ್ದ. ಎಲಾ ಎಲಾ ಅಂದವನೆ ಫೋನಾಯಿಸಿದೆ ಆ ಕಡೆಯಿಂದ ಶ್ರೀ ಮಸ್ತ್ ಇದೆ ಮಗಾ, ಸಂಜೆ ಅಂಕಿತ ಕಡೆ ಆಫೀಸಿಂದ ಬರ್ತಾ ಹೊಗಿದ್ದೆ, ಪುಸ್ತಕ ಕಾಣಸ್ತು ಎತ್ತಾಕ್ಕೊಂಡು ಬಂದೆ ಎಂದು ನಕ್ಕ, ಕೊನೆಗೆ ದಿನಚರಿ ವಿಚಾರಿಸಿ ಮತ್ತೆ ಸಿಗುವ ಜೈ ಎಂದು ಫೋನಿಟ್ಟಾಯಿತು. ಸುದ್ದಿ ತಿಳಿದು ತಲೆಗೆ ಹುಳ ಬಿಟ್ಟ ಹಾಗೆ ಆದದ್ದು ದಿಟ, ಸುಮ್ಮನೆ ಇರುವುದಾರು ಹೇಗೆ? ಶನಿವಾರ ಬೆಳಗ್ಗೆಯೇ ಸಪ್ನಗೆ ನುಗ್ಗಿ “ಪಾಕಕ್ರಾಂತಿ ಮತ್ತು ಇತರ ಕಥೆಗಳು” ತಂದಾಗಿತ್ತು. ಆದರೆ ಓದಲಿಕ್ಕೆ ಸಮಸ ಸಿಗಲಿಲ್ಲ, ಕೊನೆಗೆ ಭಾನುವಾರ ಪಾಕಕ್ರಾಂತಿಗೆ ಮಂಗಳ ಹಾಡಿದ್ದಾಯಿತು.

ಈ ಪುಸ್ತಕದಲ್ಲಿನ ಕಥೆಗಳು ಈ ಮೊದಲು ಲಂಕೇಶ್ ಪತ್ರಿಕೆ, ತುಷಾರ, ಸುಧಾ, ವಿಕ್ರಾಂತ ಕರ್ನಾಟಕ, ಪ್ರಜಾವಾಣಿ ಪತ್ರಿಕೆಗಳಲ್ಲಿ ಪ್ರಕಟವಾಗಿವೆ. ಪಾಕ ಕ್ರಾಂತಿ ಎಂದಿನ ತೇಜಸ್ವಿಯವರ ಲವಲವಿಕೆಯ ಬರಹದಂತೆ ಒಮ್ಮೆ ನವಿರು ಹಾಸ್ಯ ಮತ್ತೊಮ್ಮೆ ಗಂಭಿರ ವಿಚಾರಗಳನ್ನು ಹೇಳುತ್ತಾ ಸಾಗುತ್ತೆ. ಮೊದಲನೆ ಕಥೆ ಪಾಕಕ್ರಾಂತಿ ಅಡುಗೆ ಮನೆಯಿಂದ ಶುರುವಾಗಿ ಕಲೆ, ವಿಜ್ಞಾನ, ಭಯೋತ್ಪಾದನೆ ಹೀಗೆ ಹಲವಾರು ವಿಷಯಗಳತ್ತ ಓದುಗನನ್ನ ಕರೆದೊಯ್ಯುತ್ತಾ ಪಾಕಕ್ರಾಂತಿಯ ಹಲವಾರು ಮಜಲುಗಳನ್ನ ನವಿರಾಗಿ ನಿರೂಪಿಸುತ್ತೆ.

ಪಾಕ ಕ್ರಾಂತಿ.

ಕೆಲವೆಲ್ಲಾ ಮನುಷ್ಯನಿಗೆ ಅನುಭಸಿದ ಮೇಲೆ ಅರ್ಥವಾಗುವುದು. ಮತ್ತೊಬ್ಬರು ಹೇಳಿದರೆ ತಲೆಗೆ ಹೊಗುವುದೇ ಇಲ್ಲ. ಉದಾಹರಣೆಗೆ ನನ್ನ ಶ್ರೀಮತಿ ಊರಿಗೆ ಹೋಗುತ್ತ ಅಡಿಗೆಮನೆ ಬಗ್ಗೆ ಕೆಲವು ಸೂಚನೆಗಳನ್ನು ಕೊಟ್ಟಳು. ಯಾವ್ಯಾವ ಡಬ್ಬದಲಿ ಏನೇನಿದೆ. ಸಾರಿನ ಪುಡಿ ಎಲ್ಲಿದೆ, ಸಾಸಿವೆ ಎಲ್ಲಿದೆ, ಮೆಣಸಿನಕಾಯಿ ಎಲ್ಲಿಟ್ಟಿದ್ದೇನೆ ಇತ್ಯಾದಿ. ಇದರ ಜೊತೆದೆ ಅಡುಗೆಮನೆ ಚೊಕ್ಕಟವಾಗಿ ಇಡುವ ಅಗತ್ಯವನ್ನೂ ಒತ್ತಿ ಹೇಳುದಳು. ನನಗೆ ಇದರಿಂದ ಸ್ವಲ್ಪ ರೇಗಿತು. ನಾನು ಒಳಗೊಳಗೇ ಹೆಂಗಸರು ತಾವು ಇಲ್ಲದಿದ್ದರೆ ಪ್ರಪಂಚದ ಗಂಡಸರೆಲ್ಲಾ ಊಟವಿಲ್ಲದೆ ಸತ್ತೇ ಹೋಗುತ್ತಾರೆಂದು ತಿಳಿದಿದ್ದಾರೆ. ಬೇಳೆ ಬೇಯಿಸಿ ಅದಕೊಂದಷ್ಟು ಉಪ್ಪೂ ಖಾರ ಹಾಕಿ ಸಾರು ಮಾಡಿ, ಅನ್ನ ಬೇಯಿಸಿಕೊಂಡು ತಿನ್ನೂವಷ್ಟೂ ನಮ್ಗೆ ಚೈತನ್ಯ ಇಲ್ಲವೆ? ಅಡಿಗೆ ಮನೆ ಚೊಕ್ಕಟವಾಗಿಡಬೇಕೆನ್ನುವುದು ಅದೇನು ಅಷ್ಟೊಂದು ಮುಖ್ಯವೆ? ” ಅಡುಗೆಮನೆ ಆಪರೇಶನ್ ಥಿಯೇಟರೆ? ಏಕೆಂದರೆ ಅಡುಗೆಮನೆಯ ಕಸ, ಧೂಳು ಇತ್ಯಾದಿಗಳು ತಿನ್ನುವ ಆಹಾರದೊಳಗೆ ಬೀಳದಂತೆ ನೋಡಿಕೊಂಡರೆ ಸಾಕು. ಬೇಕಾದಷ್ಟಾಯ್ತು” ಎಂದು ಗೊಣಗಿಕೊಂಡರೂ ಊರಿಗೆ ಹೊರಟವಳ ಹತ್ತಿರ ಮತ್ತೆ ಯಾಕೆ ಕ್ಯಾತೆ ತೆಗೆದು ಜಗಳವಾಡುವುದು, ಇವಳು ಹೇಳುವುದನ್ನೆಲ್ಲಾ ಹೇಳಿ ಮುಗಿಸಲಿ ಎಂದು “ಹು ಹು” ಎಂದೆ. ಅಡಿಗೆ ಪಾತ್ರೆಗಳನ್ನು ದಿನಾ ತೊಳೆಯುವುದರ ಬಗ್ಗೆಯೂ ನನ್ನದೇ ಆದ ಕೆಲವು ಅಭಿಪ್ರಾಯಗಳಿದ್ದವು. ಅಡಿಗೆ ಪಾತ್ರೆಗಳ ಹೊರಭಾಗಗಳನ್ನು ದಿನಾ ತೊಳೆಯುವುದು ಅನವಶ್ಯಕ ಎಂದೇ ನನ್ನ ಅಭಿಮತ. ಮತ್ತೆ ಒಲೆಯ ಮೇಲಿಟ್ಟು ತಳವೆಲ್ಲಾ ಮಸಿ ಹಿಡಿಯುವ ಈ ಪಾತ್ರೆಗಳ ಹೊರಭಾಗ ಕ್ಲಿನಾಗಿದ್ದರೆಷ್ಟು! ಬಿಟ್ಟರೆಷ್ಟು! ಅಡಿಗೆಯ ರುಚಿಗೂ ಪಾತ್ರೆಗಳ ಹೊರ ಭಾಗ ತಳತಳ ಹೊಳೆಯುವುದಕ್ಕೂ ಏನಾದರೂ ಸಂಭಂದವಿದೆಯ? ಹೆಲ್ತ್ ಇನ್ಸ್ ಪೆಕ್ಟರ್ ಏನಾದರೂ ನಮ್ಮ ಅಡುಗೆಮನೆ ಒಳಗೆ ಬಂದು ಇವನೆಲ್ಲಾ ಚೆಕ್ ಮಾಡಿ ಸರ್ಟಿಫಿಕೇಟ್ ಕೊಡುತ್ತಾನ? ಕೆಲವು ಪದಾರ್ಥಗಳನ್ನು ದಿನಾ ಮಾಡುವುದೂ ಸಹ ಅನವಶ್ಯಕವೆಂದೇ ನನ್ನ ಅಭಿಪ್ರಾಯ. ಉದಾಹರಣೆಗೆ ತಿಳಿಸಾರು ಇತ್ಯಾದಿ ಯಾಕೆ ದಿನಾ ಬೆಳಿಗ್ಗೆ ಎದ್ದು ಖಾರ ಕಡೆದು ಒಗ್ಗರಣೆ ಕೊಟ್ಟು ಮಾಡುತ್ತಾ ಇರಬೇಕು. ನಾಲ್ಕಾರು ದಿನಕ್ಕೆ ಆಗುವಷ್ಟು ಒಮ್ಮೆಗೇ ಮಾಡಿಟ್ಟು ಕುದಿಸಿ ಇಡಬಹುದಲ್ಲಾ? ಹೇಗೆ ನನಗೆ ಕೆಲವು ಅಮೋಘವಾದ ಅಭಿಪ್ರಾಯಗಳಿವೆ. ಆದರೆ ಯಾವ ಹೆಂಗಸರ ಹತ್ತಿರ ಇದನ್ನು ಹೇಳಿದರೂ ಅವರು ನನ್ನ ಅಭಿಪ್ರಾಯಗಳನ್ನು ಸ್ತ್ರೀ ಸ್ವಾತಂತ್ರ್ಯದ ಹಲವು ವಿದಾನಗಳೆಂದು ಪರಿಗಣಿಸದೆ ಬೆಚ್ಚಿಬಿದ್ದು, ಇಷ್ಟೋಂದು ಅನಾಗರೀಕ ಅಭಿರುಚಿ ಇರುವ ಮನುಷ್ಯನನ್ನು ಉತ್ತಮ ಕತೆಗಾರನೆಂದು ಕರೆಯುತ್ತೇವಲ್ಲ ಎಂದು ಆಶ್ಚರ್ಯಪಡುತ್ತಾರೆ. ಆದುದರಿಂದಲೇ ಅಡುಗೆಮನೆಯಲ್ಲಿ ಕ್ರಾಂತಿಕಾರಕ ಬದಲಾವಣೆಗಳನ್ನು ಮಾಡಬೇಕೆಂದ ಯೋಚಿಸಿದ್ದ ನನ್ನ ಚಿಂತನೆ ಹೆಂಗಸರ ಬಳಿ ಹೇಳುವುದನ್ನು ನಿಲ್ಲಿಸಿದೆ. ಗಂಡಸರಿಗೆ ಹೇಳಿದರೋ, ತಮ್ಮ ಮನೆ ಹೆಂಗಸರಿಗೆ ವಿರಾಮ ಬಿಡುವು ಹೆಚ್ಚು ದೊರಕಿಸುವ ನನ್ನ ಯೋಜನೆಗಳ ಬಗ್ಗೆ ಯಾವ ಆಸಕ್ತಿಯನ್ನೂ ತೋರಿಸಲಿಲ್ಲ.

ಹೀಗೆ ಸಾಗುತ್ತೆ ತೇಜಸ್ವಿಯವರ ಪಾಕಕ್ರಾಂತಿ…

ಪಾಕಕ್ರಾಂತಿಯ ಬಗ್ಗೆ ಶ್ರೀನಿಧಿ ಏನು ಹೇಳುತ್ತಾನೆ ನೋಡಿ.


1 Response to “ಪಾಕಕ್ರಾಂತಿ ಮತ್ತು ತೇಜಸ್ವಿ.”


  1. 1 sharashchandra
    April 25, 2008 at 6:53 am

    hi, nimma link na nanna blogalli seriskollala?


Leave a Reply




ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

April 2008
M T W T F S S
« Mar   May »
 123456
78910111213
14151617181920
21222324252627
282930  

p

Powered by eSnips.com