02
Jun
08

ಒಂದಷ್ಟು ಕವನಗಳ ಜೇನುಮಳೆ.

ಕವನಗಳ ಭಾವ ಜಗತ್ತಿನಲ್ಲಿ ನನಗೆ ಮೊದಲು ಪರಿಚಿತರಾದವರು ಕೆ ಎಸ್ ನರಸಿಂಹಸ್ವಾಮಿಯವರು ಅದಕ್ಕೆ ಹಲವಾರು ಕಾರಣಗಳಿವೆ ಸರಳ ಭಾಷಾ ಪ್ರಯೋಗ ಇರಬಹುದು, ಕವನಗಳ ವಸ್ತುಗಳ ನಮ್ಮ ದೈನಂದಿನ ಬದುಕಿನಲ್ಲಿ ಹಾಸುಹೊಕ್ಕಾಗಿ ಇದದ್ದು ಇರಬಹುದು, ಭಾವಗೀತೆಗಳಾಗಿ ಎಲ್ಲರ ಮನವನ್ನ ಆವರಿದ್ದು ಇರಬಹುದು ಹೀಗೆ ಪಟ್ಟಿ ಬೆಳೆಯುತ್ತಾ ಸಾಗುತ್ತೆ. ನಂತರದ ದಿನಗಳಲ್ಲಿ ಬೇಂದ್ರೆ, ನಿಸಾರ್ ಅಹಮದ್, ಬಿ ಅರ್ ಲಕ್ಷ್ಮಣರಾಯರು, ಹೆಚ್ ಎಸ್ ವೆಂಕಟೇಶಮೂರ್ತಿ ಮತ್ತು ಲಕ್ಷ್ಮೀನಾರಾಯಣ ಭಟ್ಟರ ಹಲವಾರು ಕವನಗಳು ನನಗೆ ಮುದ ನೀಡಿವೆ. ಹೀಗೆ ನನಗಿಷ್ಟವಾದ ಕವನಗಳನ್ನ ಸಾಹಿತ್ಯಾಸಕ್ತರಲ್ಲಿ ಹಂಚಿಕೊಳ್ಳುವ ವೇದಿಯನ್ನ ಮೊದಲು ಕಲ್ಪಿಸಿದ್ದು ಆರ್ಕೂಟ್ ಪೊರ್ಟಲ್. ದಿನ ಒಂದರಂತೆ ಸರಿ ಸುಮಾರು ಒಂದು ವರ್ಷಗಳ ಅವಧಿಯಲ್ಲಿ ೨೫೦ಕ್ಕೊ ಹೆಚ್ಚು ಕವನಗಳನ್ನ ಬರಹ ತಂತ್ರಾಂಶ ದಲ್ಲಿ ಟೈಪ್ ಮಾಡಿ ಪಿಡಿಎಫ್ ಫೈಲ್ಗಳಾಗಿ ಮಾಡಿ ಮೇಲ್ ಕೂಡ ಮಾಡುತ್ತಿದ್ದೆ. ಕೆಲಸದ ಒತ್ತಡದಿಂದ ಕಳೆದ ೨- ೩ ತಿಂಗಳಿದ ಕವನಗಳನ್ನ ಹಂಚಿಕೊಳ್ಳೊದನ್ನ ನಿಲ್ಲಿಸಬೇಕಾಯಿತು. ಒಂದಷ್ಟು ಕವನಗಳನ್ನ ಕನ್ನಡ ಲಿರಿಕ್ಸ್ ವೆಬ್ ಸೈಟ್ ನಲ್ಲಿ ಹಾಕಿದ್ದೆ ನಂತರದ ದಿನಗಳಲ್ಲಿ ಅದೂ ಆಗಲಿಲ್ಲ. ಈಗ ನನ್ನಲ್ಲಿದ ಎಲ್ಲ ಕವನಗಳನ್ನ ಒಟ್ಟಿಗೆ ಸಾಹಿತ್ಯಾಸಕ್ತರಿಗೆ ಲಭ್ಯವಾಗುವಂತೆ ಗೂಗಲ್ ಪೇಜ್ (ಕವನ ಸಂಗ್ರಹ) ಮತ್ತು ಗೂಗಲ್ ಸೈಟ್ ನಲ್ಲಿ ಹಾಕಿದ್ದೇನೆ. ಮತ್ತೆ ಬಿಡುವು ಮಾಡಿಕೊಂಡು ಹೊಸ ಹೊಸ ಕವನಗಳನ್ನ ಇಲ್ಲಿ ಸೇರಿಸುವ ಭರವಸೆಯೊಂದಿಗೆ ನಿಮಗಿದೊ ಅರ್ಪಣೆ. ನಿಮಗೆ ಈ ಕವನಗಳ ಪಿಡಿಎಫ್ ಆವೃತ್ತಿ ಬೇಕಿದ್ದಲ್ಲಿ ನಿಮ್ಮ ಮೈಲ್ ವಿಳಾಸ ಕಳುಹಿಸಿ.

*********************************************

ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟರ ಹಲವಾರು ಕವನಗಳು ನನಗೆ ಇಷ್ಟ, ಅದರಲ್ಲೂ ನನ್ನನ್ನ ತುಂಬಾ ಕಾಡಿದ ಒಂದು ಕವನವನ್ನ ಇಲ್ಲಿ ಬರೆದಿರುವೆ. ಕವನ ಸಂಕಲನ – ವೃತ್ತ  ಕವನದ ಶಿರ್ಶಿಕೆ “ಸೀಮಂತಿನಿ”, ನಿಮಗೂ ಕೂಡ ಹಿಡಿಸ ಬಹುದು.

ಸೀಮಂತಿನಿ.

ಯಾರಿವಳು?

ಇದ್ದಕ್ಕಿದ್ದಂತೆ ಪಕ್ಕದಲೆ ಬದಲಾದವಳು?

ಗಂಡನೆಂಬವನನ್ನ ಕಂಡ ಕಂಡಂತೆಯೇ

ಕಂದ ಎಂಬಂತೆ ಮಮತೆಯಲಿ ಮಾತಾಡುವಳು!

ಅಪ್ಪ ಬಂದವನನ್ನು ತಪ್ಪು ಮಾಡಿದ ಎಳೆಯನಂತೆ

ಉಡಿಯಲ್ಲಿ ಹಾಕಿ ಶಮಿಸಿದವಳು

ಗುಟುರು ಮದವನು ಮೆಟ್ಟಿ ಎದ್ದ ಹೆಡೆಯನು ತಟ್ಟಿ

ಹೊಲೆಗಸದ ತೊಟ್ಟಿಯನು ಹೀಗೆ ತೊಳೆದವಳು?

ಇವಳೆ

ಬೆನ್ನ ಬಳಿ ಬಂದು ಕೊರಳಿಗೆ ತೂಗುತಿದ್ದವಳು?

ಕೈಯ ಪುಸ್ತಕವನ್ನು ಕಿತ್ತು ಗೂಡೊಳಗೆಸೆದು

ಸಾಕು ಬಿಡಿ ಸನ್ಯಾಸ ಎಂದು ತೋಳೆಳೆದವಳು!

ಕೆನ್ನೆಯಲಿ ಬೆರಳಿಟ್ಟು

ಕೊರಳ ಸರ ತುಟಿಗಿಟ್ಟು

ಏನೊ ಕಕಮಕ ಹಿಡಿಸಿ ಗೆದ್ದು ನಕ್ಕವಳು?

ಈಗ ಅದೆ ಹುಡುಗಿ

ಬೇಸಿಗೆಯ ಉರಿಗಣ್ಣ

ಬೆಳುದಿಂಗಳಲಿ ತೊಳೆದು

ಗರ್ಭಗುಡಿ ಹಣತೆಯನು ಹಚ್ಚಿರುವಳು;

ಮೊನ್ನೆ ಸೀಮಂತದಲಿ ಹಸೆಯೇರಿದಾಗಿಂದ

ಜಗದಂಬೆ ಭಾವಕ್ಕೆ ಸಂದಿರುವಳು!

ಒಲೆ ಮೇಲೆ ಅನ್ನ ಸೀಯುತ್ತಲಿದೆ ಮೊನ್ನೆ;

ಎದುರಿಗೇ ಕುಳಿತು

ಹಾಲಪಾತ್ರೆಗೆ ಬಿದ್ದ ಇರುವೆಗಳ ಮೇಲೆತ್ತಿ

ನೆಲಕಿಳಿಸಿ ಹರಿಯಬಿಡುತಿದ್ದಾಳೆ, ಒಂದೊಂದೆ!

ಪೊರಕೆ ತುದಿಯಲಿ ಹಿಂದೆ

ಜಿರಲೆಗಳ ಬಡಿದವಳು ಇವಳೆ?

‘ಪಾಪ’ ಎಂದರೆ – ‘ಅಹ! ಶುದ್ದ ಕನ್ನಡಿಗ’

ಎಂದು ಛೇಡಿಸಿದವಳು!

ಈಗ ಹೊರಳಿದೆ ಕರಳು,

ಮೊದಲ ಬಾರಿಗೆ ಬಸಿರ ಸವರಿದೆ ಯಶೋದೆಯ

ಬೆಣ್ಣೆ ಬೆರಳು.

ಎಲ್ಲಿ ತರೆಮರೆಸಿಕೊಂಡುವೊ ಏನೊ ಈಗಿವಳ

ಸಿನಿಮ ಹೋಟೆಲುಗಳಿಗೆ ಅಲೆವ ಚಪಲ,

ಆಗೀಗ(ನನ್ನನೂ ಜೊತೆಗೆಳೆದುಕೊಂಡು!)

ದೇವಸ್ಥಾನ ಯಾತ್ರೆಯಷ್ಟೇ ಈಗ ಎಲ್ಲ!

ಮುಡಿತುಂಬ ಹಣೆತುಂಬ ಕೈತುಂಬ ತನ್ನೆಲ್ಲ

ಮಾಂಗಲ್ಯ ಸೌಭಾಗ್ಯ ಮೆರೆಸಿ,

ಶಾಂತಮುಖದೊಳಗೊಂದು ಮರುಳುನಗೆ ನಿಲಿಸಿ,

ಇವಳೀಗ ಕಾರ್ತೀಕದಾಗಸದ ಹಾಡು,

ಕಣ್ಣೊ, ಹುಣ್ಣಿಮೆಯಿರುಳ ಕಡಲ ಬೀಡು!

ಜೊತೆಗೆ ನಡೆವಾಗ

ನನ್ನ ಹೆಜ್ಜೆಗು ಹೆಜ್ಜೆ ಮುಂದೆಯಿಟ್ಟು,

ಈಗ? ಎಂಬಂತೆ ಹುಬ್ಬೆತ್ತರಿಸಿ ನಕ್ಕು ಸ್ಪರ್ಧಿಸಿದ್ದವಳು

ಈಗೆಲ್ಲ ಅಬ್ಬರ ಬಿಟ್ಟು

ಕಾಲೆಳೆಯುವಳು ಏಕೊ ತೀರ.

ಕನಸುಗಣ್ಣೆಗೆ ದಾರಿಯಲ್ಲು ಏನೋ ಧ್ಯಾನ,

ಮೈ ಮಾತ್ರ ಇಲ್ಲಿ, ಮನಸೆಲ್ಲೊ ಹೊರಟಿದೆ ಯಾನ,

ಅಡಿಗಡಿಗು ಒಂದೊಂದು ಗುಡಿಕಟ್ಟಿ ಬಾಗಿಲಲಿ

ಹೊರಳಿ ಬೇಡಿದೆ ಮಗುವಿಗಭಯದಾನ.

ಎಲ್ಲ ಬಾಳಲಿ ಎಂಬ ಭಾವ

ಚೆಲ್ಲುತಿದೆ ಕಣ್ಣು ಅಲುಗಿದೆ ಹೊಟ್ಟೆಯೊಳಗಿರಿವ ಪುಟ್ಟ ಜೀವ;

ಗಟ್ಟಿ ಸ್ವಾರ್ಥಕೆ ಈಗ ಮಳೆ ಬಿದ್ದು ಮೈಯೊಡೆದು

ಉಸಿರಾಡುತಿದೆ ಮಣ್ಣ ತೇವ!

-ಎನ್ ಎಸ್ ಲಕ್ಷ್ಮೀನಾರಾಯಣ ಭಟ್ಟ.

http://sites.google.com/site/kavanasangraha/

http://kavana.sangraha.googlepages.com/home


4 Responses to “ಒಂದಷ್ಟು ಕವನಗಳ ಜೇನುಮಳೆ.”


  1. 1 Tina
    June 12, 2008 at 10:07 am

    ಅಮರ,
    ಬಹಳ ಒಳ್ಳೇ ಕೆಲಸ ಮಾಡಿದೀರಿ!!
    ಇಲ್ಲಿ ನೀವು ಕೊಟ್ಟಿರುವ ಕವಿತೆಯನ್ನ ನಾನು ಡಿಗ್ರಿಯಲ್ಲಿರುವಾಗ ಓದಿ ನಾನೂ ಹೀಗೆಲ್ಲ ಚೆಂದವಾಗಿ ಬರೆಯೋ ಹಾಗಾದರೆ ಎಂದು ತವಕ ಪಟ್ಟಿದ್ದಿದೆ.
    ಎಲ್ಲ ಕವಿತೆಗಳನ್ನ ಓದಿ ಸವಿಯುವೆ.
    ತ್ಯಾಂಕು!!
    -ಟೀನಾ.

  2. June 25, 2008 at 5:14 am

    ಟೀನಾ ಮೇಡಮ್ ನಿಮ್ಮ ಕಮೆಂಟು ನೋಡಿ ಖುಷಿ ಆಯ್ತು… :) ಇನ್ನೂ ಸಾಕಷ್ಟು ಕವನಗಳಿವೆ ನನ್ನ ಬಳಿ ಅವನ್ನೆಲ್ಲ ಟೈಪಿಸಿ ಸೇರಿಸ ಬೇಕು … ಸಮಯ ಸಿಕ್ಕಾಗ ಮಾಡುತ್ತೇನೆ.

  3. June 29, 2008 at 1:48 am

    ಶ್ರೀಶ್ರೀಶ್ರೀ

    ಬಹಳ ಬಹಳ ಒಳ್ಳೆಯ ಕೆಲಸ ಮಾಡುತ್ತಿದ್ದೀರಿ. ಈ ಬೃಹದ್ ಜಗದಲಿ ಸಣ್ಣ ಗುಂಪಿನ ಮಧ್ಯೆ ಇಳಿದು, ಉಳಿದು, ಬೆಳೆದ ಕವಿಗಳು, ಜಗತ್ತಿಗೆ ತಮ್ಮ ಅಭಿವ್ಯಕ್ತಿಯ ಸಾರಲಾಗುತ್ತಿಲ್ಲ. ಅದಕ್ಕೆ ಹಲವು ಕಾರಣಗಳಿವೆ. ಇ-ಲೋಕ ಅದೆಲ್ಲವನ್ನೂ ಮೆಟ್ಟಿ ಮೀರಿ, ಜಗದ ಮೂಲೆ ಮೂಲೆಗಳನ್ನು ಮುಟ್ಟುತಿಹುದು. ಈ ದಿಸೆಯಲಿ ಇ-ಲೋಕದ ಪರಿಚಯ ಅಷ್ಟಾಗಿರದ ದಿಗ್ಗಜರ ಕೃತಿಗಳಿಗೆ ಕಂದೀಲನ್ನು ತೋರಿಸುತ್ತಿರುವ ಈ ನಿಮ್ಮ ಕೃತ್ಯ ಸ್ತುತ್ಯಾರ್ಹ.

    ಒಳ್ಳೆಯ ಕೆಲಸ ಅನವರತ ಸಾಗಲಿ

    ಹಾಂ! ಹಾಂ! ಹಾಂ! ನನ್ನ ದಿನದ ಬಳಲಿಕೆಯನು ಮರೆತು ಮತ್ತು ಜೀವಸೆಲೆ ಪುಟಿಯುವಂತೆ ಮಾಡಿಸುತ್ತಿರುವ ಆ ನಿಮ್ಮ ಕವನ / ಗಾಯನ ಸಂಗ್ರಹ, ಎಂದರೆ ಅತಿಶಯೋಕ್ತಿಯ ಮಾತಲ್ಲ.

    ಗುರುದೇವ ದಯಾ ಕರೊ ದೀನ ಜನೆ

  4. July 3, 2008 at 1:42 pm

    ಗುರುಗಳೆ ನಿಮ್ಮ ಕಮೆಂಟು ನೋಡಿ ಖುಷಿಯಾಯ್ತು …. ನಿಮ್ಮ ಪ್ರೀತಿ… ಆಶಿರ್ವಾದ ಸದಾ ಇರಲಿ :)



ಯಾವಾಗ ಬರೆದದ್ದು.

ಈ ತಿಂಗಳ ಪಂಚಾಂಗ.

June 2008
M T W T F S S
« May   Jul »
 1
2345678
9101112131415
16171819202122
23242526272829
30  

p

Powered by eSnips.com