ಈ ವಾರ ಅಮ್ಮ ನನ್ನಲ್ಲಿಗೆ ಬರುವುದಾಗಿ ಮೊದಲೆ ನಿಶ್ಚಯವಾಗಿದ್ದರಿಂದ ನಾನು ಮೈಸೂರಿನ ದಾರಿ ಹಿಡಿಯುವುದು ತಪ್ಪಿತು. ಅಮ್ಮ, ತಂಗಿ ಇಬ್ಬರು ಬರಬೇಕಾಗಿದ್ದರೂ ಅವಳಿಗೆ ರಜೆ ಸಿಗದ ಕಾರಣ ಅಮ್ಮ ಒಬ್ಬರೆ ಬರಬೇಕಾಗಿ ಬಂತು. ನಾನು ಬೆಂಗಳೂರಿಗೆ ಬಂದು ನೆಲಸಿ ಎರಡುವರೆ ವರ್ಷಗಳಾದರು ಅಮ್ಮ ಮನೆಗೆ ಬಂದಿರಲಿಲ್ಲ. ಅಪ್ಪ ಒಮ್ಮೆ ಬಂದು ಹೋಗಿದ್ದರು, ಆಗ ನಾವು ಇನ್ನೊಂದು ಪುಟ್ಟ ಮನೆಯಲ್ಲಿದ್ದೆವು. ಹಲವು ದಿನಗಳ ನಂತರ ತನ್ನ ಪ್ರಪಂಚವನ್ನು ಬಿಟ್ಟು ನನ್ನಲಿಗೆ ಅಮ್ಮ ಬರುತ್ತಿದ್ದಾಳೆಂಬ ಖುಷಿ ಒಂದು ಕಡೆಯಾದರೆ ಅವಳು ಸಲಿಸಾಗಿ ಮನೆ ತಲುಪಿದರೆ ಸಾಕು ಅಂದುಕೊಳ್ಳುತ್ತಿದ್ದೆ. ಮೊದಲಾಗಿ ಅಮ್ಮ ದೂರದ ಪ್ರಯಾಣ ಮಾಡುವುದೆ ಅಪರೂಪ ಅದರಲ್ಲೂ ನಾವ್ಯಾರಾದರೂ ಜೊತೆಯಲ್ಲೆ ಇರುತ್ತೆವೆ ಅಥವ ಯಾರಾದರು ಸಂಭದಿಕರೊ, ಪರಿಚಿತರೊ ಜೊತೆಗಿರುತ್ತಿದ್ದರು. ಬೆಳಿಗ್ಗೆ ಬೇಗ ಬಿಟ್ಟು ತಿಂಡಿಯ ಹೊತ್ತಿಗೆ ನಿನ್ನ ಮನೆಗೆ ಬರ್ತಿನಿ ಕಣೋ ಅಂದಿದ್ದಳು ರಾತ್ರಿ ಮಾತಾಡಿದ್ದಾಗ. ಬೆಳಿಗ್ಗೆ ೮ ಗಂಟೆಯಾದರು ಹೊರಟ ಸುಳಿವು ಸಿಗಲಿಲ್ಲ, ನಾನು ಕರೆಮಾಡಲಾಗಿ ಇನ್ನು ಹೊರಟಿಲ್ಲ ಮನೆಯ ಕೆಲಸವೆಲ್ಲಾ ಈಗ ತಾನೆ ಮುಗಿದಿದೆ, ಇನ್ನೆನು ಹೊರಡುವುದಾಗಿ ತಂಗಿಯಿಂದ ಉತ್ತರ ಬಂತು. ಅವರು ಬಸ್ ನಿಲ್ದಾಣಕ್ಕೆ ಬಂದಾಗ ೯.೩೦ ಆಗಿತ್ತು, ತಂಗಿ ಕರೆಮಾಡಿ ಯಾವ ಬಸ್ಸು ಹತ್ತಿಸುವುದು ಎಂತೆಲ್ಲಾ ನನ್ನ ವಿಚಾರಿಸಿ ಮೈಸೂರು ಮಲ್ಲಿಗೆ ತಡೆ ರಹಿತಕ್ಕೆ ಹತ್ತಿಸು, ಅದು ಮೆಜಸ್ಟಿಕ್ ನಿಲ್ದಾಣಕ್ಕೆ ಬರೊಲ್ಲ ನಾನು ಸ್ಯಾಟಲೈಟ್ ನಿಲ್ದಾಣದಲ್ಲಿ ಕಾಯುವುದಾಗಿ ತಿಳಿಸಿದೆ. ಅಮ್ಮ ಬರಲು ಮೂರು ತಾಸು ಬೇಕು, ೧೨ ಕ್ಕೆ ಅಲ್ಲಿ ತಲುಪಿದರೆ ಸಾಕು ಎಂದುಕೊಂಡು ಬೆಳಗಿನ ತಿಂಡಿ ಮಾಡುಲು ಸೋಮಾರಿಯಾದೆ, ಕೊನೆಗೆ ನನ್ನ ಗೆಳೆಯ ಮ್ಯಾಗಿ, ಒಂದಷ್ಟು ಚಹ ಮಾಡಿ ಮುಂದೆ ಇಟ್ಟ.
ದಿನಪತ್ರಿಕೆಗಳ ಪುಟಗಳಲ್ಲಿ ಮುಳುಗು ಹಾಕುವುದರೊಳಗೆ ಸಮಯ ೧೦.೩೦ ಆಗಿತ್ತು, ತಯಾರಾಗಿ ಹೊರಡುವ ಅಂದುಕೊಂಡಷ್ಟರಲ್ಲಿ ಸ್ಪೂರ್ತಿ ಕರೆಮಾಡಿ ಅಣ್ಣ ನಾನು ಕೊರಮಂಗಲದಲ್ಲಿದ್ದಿನಿ ಕಣೋ, ದೊಮ್ಮಲೂರಿಗೆ ಬಾರೋ, ನನ್ಗೆ ನಿಮ್ಮ ಮನೆಯ ಹತ್ತಿರ ಕೆಲ್ಸ ಇದೆ ಎಂದಾಗ ಅವಳಿಗೆ ಅಮ್ಮನ ವಿಷಯ ಹೇಳಿ ಬೇಗ ಬಾ ಅಂದೆ. ಸ್ಪಲ್ಪ ಹೊತ್ತಿನಲ್ಲೆ ಮತ್ತೆ ಕರೆಮಾಡಿ ಈ ಬಸ್ಸು ನೇರವಾಗಿ ಬರ್ತಿಲ್ಲ ಕಣೋ ಎಮ್ ಜಿ ರೋಡ್ ಕಡೆಯಿಂದ ಬರುತಂತೆ ಎಂದು ಗೊಣಗಿದಳು, ನೀನು ನನ್ಗೆ ಸಿಗೂ ಆಯ್ತಾ, ನಾನು ಪರ್ಸ್ ಮರ್ತು ಬಂದಿದ್ದಿನಿ, ಅದಕ್ಕೆ ನಿನ್ಗೆ ಫೋನ್ ಮಾಡಿದ್ದಿ ಅಂದಳು. ಆಯತು ಬಾ ಬೇಗ, ನಿನ್ನ ಬಿಡಲಾಗದಿದ್ದರೆ ಹಣ ಕೊಟ್ಟು ಹೊಗ್ತಿನಿ ಅಂದೆ, ಕೊನೆಗೆ ತಯಾರಾಗಿ ಮನೆಯಿಂದ ಕದಲುವ ಹೊತ್ತಿಗೆ ೧೧.೩೦ ಆಗೆ ಹೊಗಿತ್ತು. ಈ ಮದ್ಯೆ ಸ್ಪೂರ್ತಿಗೆ ಕರೆಮಾಡಿ ಎಲ್ಲಿದಿಯಾ ಎಂದಾಗ ಟಿರ್ನಟ್ರಿ ವೃತ್ತ ಅಂದಳು, ಹಾಗಾದರೆ ಅಲ್ಲೆ ಇಳ್ಕೊ ಅಲ್ಲೆ ಸಿಕ್ಕುವುದಾಗಿ ಹೇಳಿ ಹೊರಟೆ, ನಾನು ಸಿ ಎಮ್ ಎಚ್ ರಸ್ತೆಯ ಟ್ರಾಫಿಕ್ ಬೆದಿಸಿ ಹಲಸೂರು ತಲುಪುದುದರೊಳಗೆ ಅವಳು ಅಲ್ಲಿಗೆ ಬಂದಿದ್ದಳು, ಅವಳ ಕೈಯಲ್ಲಿ ಹಣವಿಟ್ಟು ನಾನು ಬಸ್ ಸ್ಟಾಂಡಿನ ಕಡೆ ದಾವಿಸಿದೆ. ಇನ್ನೆನ್ನು ರಿಚ್ಮಂಡ್ ವೃತ್ತ ತಲುಪಿದೆ ಅನ್ನುವಷ್ಟರಲ್ಲಿ ಪ್ಯಾಂಟ್ ಕಿಸೆಯಲ್ಲಿದ್ದ ಮೊಬೈಲ್ ಗುರುಗುಟ್ಟುತ್ತಿತ್ತು, ಆ ಕೆಟ್ಟ ಟ್ರಾಫಿಕ್ ನಲ್ಲಿ ಗಾಡಿ ಪಕ್ಕಕ್ಕೆ ನಿಲ್ಲಿಸಿ ನೋಡಿದಾಗ ಬೆಂಗಳೂರಿನ ನಂ,
ಆ ಕಡೆಯಿಂದ ಅಮ್ಮ ನಾನು ಬಂದಿದ್ದಿನಿ ಕಣೋ, ಇವಾಗ ಇಳಕೊಂಡೆ ನಿನೆಲ್ಲಿದಿಯಾ?
ನಾನು ಬರ್ತಿದ್ದೆನೆ ಎಲ್ಲಿ ಇಳಿದಿದ್ದಿಯಾ?
ನಾಯಂಡಲ್ಲಿ ಅಂತ ಯಾರೊ ಹೇಳಿದ್ರು.
ಅಲ್ಲಿಗೆ ಅರ್ಧ ಜೀವ ಹೊದಂತಾಯಿತು. ಮತ್ತೆ ಕೇಳಿದೆ
ಅಮ್ಮ ಅ ಬಸ್ ಸ್ಟಾಂಡ್ ದೊಡ್ಡದಾಗಿದೆಯಾ?
ಪರವಾಗಿಲ್ಲ ಸುಮಾರಾಗಿದೆ, ಇಲ್ಲೊಂದು ಹೋಟೆಲ್ ಕೂಡ ಇದೆ.
ಕಾಯನ್ ಬೂತಿನ ಕುಯ್ ಕುಯ್ ಸದ್ದು ಶುರುವಾದಂತೆ ಎದೆಯ ಕಂಪನಗಳಲಿ ಏರಿಳಿತ ಗೊಚರಿಸುತಿತ್ತು.
ಅಲ್ಲೆ ಇರು ಎಲ್ಲೂ ಹೋಗಬೇಡ ನಾನು ಬರ್ತೆನೆ ಸ್ವಲ್ಪ ಹೊತ್ತಲ್ಲೆ.
ರಿಚ್ಮಂಡ್ ವೃತ್ತ ದಾಟಿದವನಿಗೆ ಮುಂದೆ ಸಿಕ್ಕ ಸಿಗ್ನಲ್ ಗಳು ಮುಂದೆ ಚಲಿಸಿದಂತೆ ಹಸಿರಾಗುತ್ತಿದ್ದವು, ಒಂದೆ ಸಮನೆ ಜಾಗ ಸಿಕ್ಕಲ್ಲೆಲ್ಲ ಮುನ್ನುಗ್ಗುತ್ತಾ ಮಾರುಕಟ್ಟೆಯ ಮೇಲು ಸೇತುವೆ ತುಸು ಬೇಗನೆಯೆ ದಾಟಿಕೊಂಡೆ. ಮನದಲ್ಲಿ ಆವರಿಸಿಕೊಳ್ಳುತ್ತಿದ್ದ ಭಯ ಆತಂಕ ಮುಂದೆ ಮುಂದೆ ಸಾಗಿದಂತೆ ಹೆಚ್ಚುತ್ತಲೆ ಇತ್ತು. ಸ್ಯಾಟಲೈಟ್ ಬಸ್ ನಿಲ್ದಾಣದಲ್ಲೆ ಇಳಿದಿದ್ದಾಳೆ ಅವಳಿಗೆ ಹೇಳಲು ಗೊತ್ತಾಗುತ್ತಿಲ್ಲ ಎಂದು ನಾನೆ ಹೇಳಿಕೊಂಡೆನಾದರು, ಇಲ್ಲ ಮುಂಚಿತವಾಗೆ ಇಳಿದಿರಬಹುದು ಅನ್ನೊ ಆತಂಕ ಹೆಮ್ಮರವಾಗಿ ಬೆಳೆಯುತ್ತಲೆ ಇತ್ತು. ಕೊನೆಗೂ ಸ್ಯಾಟಲೈಟ್ ಬಸ್ ನಿಲ್ದಾಣ ತಲುಪಿ, ಮೈಸೂರಿನಿಂದ ಬಂದು ನಿಲ್ಲುವ ನಿಲ್ದಾಣದ ಭಾಗದಲ್ಲಿ ಅಮ್ಮನ್ನ ಹುಡುಕಲು ಮೊದಲುಗೊಂಡೆ. ಆ ಅಪರಿಚಿತ ಮುಖಗಳಲಿ ಪರಿಚಿತರನ್ನ ಹುಡುಕುತ್ತಾ ಅಮ್ಮ ಇವತ್ತು ಯಾವ ಬಣ್ಣದ ಸೀರೆ ಉಟ್ಟಿದ್ದಾಳೆ ಎಂದು ಗೊತ್ತಿದ್ದರೆ ಹುಡುಕಲು ಅನುವಾಗುತ್ತಿತ್ತು ಅಂದುಕೊಂಡೆನಾದರು, ತಂಗಿಗೆ ಕರೆಮಾಡಿ ಕೇಳಿದರೆ ಅವಳು ಗಾಬರಿಯಾಗುತ್ತಾಳೆಂದು ಅನಿಸಿ ಸುಮ್ಮನಾದೆ. ವಿಶಾಲವಾದ ನಿಲ್ದಾಣದಲ್ಲಿ ಅಲ್ಲಲಿ ಕೂತು ತುಕಡಿಸುತ್ತಿದ ಕೆಲವೆ ಮಂದಿ ಇದ್ದರು. ನಿಲ್ದಾಣದ ಹಿಂದೆ ಮುಂದೆ ಮೂರು ನಾಲ್ಕು ಬಾರಿ ಪ್ರದಕ್ಷಿಣೆ ಹಾಕಿದರು ಅಮ್ಮನ ಸುಳಿವು ಸಿಗಲಿಲ್ಲ. ಕಾಯನ್ ಬೂತ್ ಗಳ ಪಕ್ಕದಲಿ ಒರಗಿ ಎತ್ತರಿಸಿದ ದನಿಯಲ್ಲಿ ಮಾತಾಡುತ್ತಿದ್ದವರಿಂದ ಹಿಡಿದು, ತಮ್ಮ ಜೊತೆ ತಂದ ವಸ್ತುಗಳ ಚಕ್ರವ್ಯೂಹದಲ್ಲಿ ಸೇರಿ ತೂಕಡಿಸುತ್ತಿದ್ದವರಲ್ಲಿ, ಕದಂಬ ಹೋಟೆಲ್ ನಿಂದ ಸಂತೃಪ್ತರಾಗಿ ಹೊರ ಬರುತ್ತಿದವರಲ್ಲಿ ಮತ್ತೆ ಪಾಯಿಖಾನೆಯಿಂದ ಮೂಗಿಗೆ ಕರವಸ್ತ್ರ ತುರುಕಿ ಬರುತ್ತಿದ್ದರಲ್ಲಿ ಅಮ್ಮನನ್ನ ಹುಡುಕುತ್ತಿದ್ದೆ.
ಕಿಸೆಯಲ್ಲಿ ಗುರುಗುಟ್ಟುತ್ತಿದ್ದ ಮೊಬೈಲ್ ನೋಡಿ ಅಮ್ಮನ ಕರೆಯೆಂದು ತಿಳಿಯಿತು, ನಾನು ಬಂದೆ ನೀನು ಎಲ್ಲಿದ್ದಿಯಾ? ನೀನು ಇಳಿದಿರೋದು ಎಲ್ಲಿ ಅಂತ ಸರಿಯಾಗಿ ವಿಚಾರಿಸಿದ್ದಿಯಾ ಅಂದೆ, ಹೂ ಕಣೊ ನಾಯಂಡಳ್ಳಿ ಅಂತೆ , ಇಲ್ಲಿ ಮೈಸೂರಿಂದ ಬರೊ ಬಸ್ಸು ಬರ್ತಿವೆ, ಮೈಸೂರಿನ ಕಡೆ ಹೊರಡೊ ಬಸ್ಸು ಬರ್ತಿವೆ, ಇಲ್ಲೆ ಬಸ್ ಸ್ಟಾಂಡ್ ನಲ್ಲೆ ಇದ್ದಿನಿ ಅಂದಳು, ಬರ್ತಿನಿ ಇರೂ ಅಲ್ಲೆ ಬೇಗ ಅಂದು, ಸೀದಾ ಟಿ ಸಿ ಬಳಿ ವಿಚಾರಿಸಿದೆ ನಾಯಂಡಳ್ಳಿ ಅಂದರೆ ಯಾವ ಸ್ಟಾಪು? ಎಷ್ಟು ದೂರ ಹೊಗಬೇಕು? ಅಂತ. ಎರಡು ಕಿ ಮೀ ಆಗುತ್ತೆ ಹಿಂದಿನ ಸ್ಟಾಪು ಅಂದ. ಗಾಡಿ ತೆಗೆದು ಹೊರಡುತ್ತಿದ್ದಾಗ ಮತ್ತೊಂದು ಗುರು ಗುರು ಸದ್ದಾಯಿತು, ಮನೆಯಿಂದ ಅಪ್ಪ ಕರೆಮಾಡಿದ್ದರು. ಅಮ್ಮ ಬಂದಿದ್ದಾರೆ ನಾನು ಹೊಗ್ತಿದ್ದೆನೆ ಎಂದಷ್ಟೆ ಹೇಳಿ ಮತ್ತೆ ಮಾಡುವುದಾಗಿ ಹೇಳಿ ಹೊರಟೆ.
ಮಧ್ಯಾನದ ಬಿಸಿಲಿನ ಝಳಪು, ಈ ಸನ್ನಿವೇಷ ಎರಡು ಒಂದುಗೂಡಿ ಹೆಲ್ಮೆಟ್ ಒಳಗಿನ ತಲೆ ಬಿಸಿ ಬಿಸಿ ಬೊಂಡ ದಂತಾಗಿ, ಅಮ್ಮನನ್ನು ಕಾಣುವ ತನಕ ಸಮಾಧಾನ ಇರಲಿಲ್ಲ. ರಿಂಗ್ ರೋಡ್ ದಾಟಿ ಅಂಗಡಿಗಳ ಮುಂದೆ ತೂಗು ಬಿಟ್ಟಿದ್ದ ಬೊರ್ಡುಗಳನ್ನು ಗಮನಿಸಿ ನಾಯಂಡಳ್ಳಿ ಎಂದು ಖಚಿತಪಡಿಸಿಕೊಂಡೆ. ರಸ್ತೆಯನ್ನ ದಾಟಿ ಬಸ್ ನಿಲ್ದಾಣವನ್ನು ಸಮೀಪಿಸಿತ್ತಿದ್ದಂತೆ ಅಮ್ಮನ ದರ್ಶನವಾಗಿ ಉರಿಯುವ ಬೆಂಕಿಗೆ ತಂಪನೆರೆದಷ್ಟು ನೆಮ್ಮದಿಯಾಯಿತು. ಆ ಚಿಕ್ಕ ನಿಲ್ದಾಣದಲ್ಲಿ ನಿಂತ ಅಮ್ಮ ಹೋಗಿ ಬರುವ ವಾಹನಗಳ ಕಡೆ ಕಣ್ಣಾಡಿಸುತ್ತಾ ನನ್ನ ಹುಡುಕುತ್ತಿದ್ದಳು. ಅಮ್ಮ ನೀನು ಎರಡು ಕಿ ಮೀ ಮುಂಚೆನೆ ಇಳಿದಿದ್ದಿಯಾ ಗೊತ್ತಾ ನಿನಗೆ? ಆಗ ಅವಳಿಗೆ ಅರಿವಾದದ್ದು ನಾನು ಮೊದಲೆ ಇಳಿದಿದ್ದೇನೆ ಅಂತ. ಹೌದೆನೋ ನನಗೆ ಯಾರೊ ಹೇಳಿದ್ರು ಇಲ್ಲೆ ಇಳಿಲಿಕ್ಕೆ ಇಳಕೊಂಡೆ ಮುಗ್ದವಾಗಿ ಉತ್ತರಿಸಿದಳು. ಹಿಂದಿನ ದಿನ ಅಮ್ಮನೊಂದಿಗೆ ಮಾತನಾಡಿ ಹೊರಡುವ ಸಮಯವೆಲ್ಲ ನಿರ್ಧರಿಸಿದ್ದಾಗ್ಯೂ, ಮತ್ತೆ ತಂಗಿಗೆ ಕರೆಮಾಡಿ ಚಿಟಿಯಲ್ಲಿ ನನ್ನ ಮತ್ತು ನಿನ್ನ ಪೋನ್ ನಂಬರ್ ಬರೆದು ಅಮ್ಮನ ಕೈಲಿ ಕೊಟ್ಟಿರು, ಅಮ್ಮನಿಗೆ ಫೋನ್ ಮಾಡಲು ತಿಳಿಯದಿದ್ದರು ನಂಬರ್ ಇದ್ದರೆ ಯಾರ ಬಳಿಯಾದರು ಫೋನ್ ಮಾಡಿಸುತ್ತಾಳೆ ಎಂದಿದ್ದೆ. ನೆನ್ನೆ ಮುಂಜಾಗ್ರತೆ ವಹಿಸಿದ್ದು ಉಪಯೋಗಕ್ಕೆ ಬಂದದ್ದನ್ನು ನೆನೆದು ಸಮಾಧಾನ ವಾಯಿತು. ಅಮ್ಮ ಬಂದ ವಿಚಾರ ತಂಗಿಗೆ ತಿಳಿಸಿ ಅಲ್ಲಿಂದ ಹೋರಟಾಗ ೧ ಗಂಟೆಯಾಗಿರಬಹುದು, ಬೆಂಗಳೂರಿನ ಕಡು ಮಧ್ಯಾನದ ದರ್ಶನ ಭಾಗ್ಯ ಅಮ್ಮನಿಗೆ ನನ್ನ ಜೊತೆ ಸಿಕ್ಕಿತು, ಕ್ಕಿಕ್ಕಿರಿದ ರಸ್ತೆಗಳಲ್ಲಿ ಹೆಣಗಾಡುತಿದ್ದ ನನ್ನತ್ತ ನೋಡಿ ಬಸ್ ನಲ್ಲೆ ಬರೊದಲ್ಲವಾ ನೀನು ಎಂದಳು, ಬಸ್ ನಲ್ಲಿ ಬಂದಿದ್ದರೆ ಸಂಜೆ ಹೊತ್ತಿಗೆ ನಿನ್ನ ಹುಡುಕುತ್ತಿದ್ದೆ ಅಷ್ಟೆ ಅಂತ ನಕ್ಕೆ. ನೀನು ದಿನ ಇದೆ ರಸ್ತೆಯಲ್ಲೆ ಓಡಾಡೊದಾ, ಅವಳಿಗೆ ಯೋಚನೆ ಶುರುವಾಗಿತ್ತು, ನನ್ನ ಮಗ ದಿನ ಇಲ್ಲಿ ಹ್ಯಾಗೆ ಓಡಾಡುತ್ತಾನೆ? ಇಲ್ಲಮ್ಮ ನಾನು ಯಾವಗಲು ಬರೊಲ್ಲ ನಾನು ಓಡಾಡೊ ರಸ್ತೆಲಿ ಇಷ್ಟೊಂದು ಟ್ರಾಫಿಕ್ ಇರಲ್ಲ ಅಂದೆ ಕೊಂಚ ಸಮಾಧಾನವಾದ ಹಾಗೆ ಕಂಡಳು.
ಇನ್ನೂ ಎಷ್ಟು ದೂರ ಹೋಗ ಬೇಕು ಕೇಳುತ್ತಿರುವಾಗಲೆ ಎಡಭಾಗಕ್ಕೆ ಹರಡಿಕೊಂಡಿದ್ದ ವಿಶಾಲ ಜಲವನ್ನ ಕಂಡು , ಇದು ಹಲಸೂರು ಕೆರೆ ಅಲ್ವ ? ಅಂದಾಗ, ಅಬ್ಬ! ಪರವಾಗಿಲ್ಲ ಇದೊಂದು ಜಾಗ ಮುಂಚೆ ಹೇಗಿತ್ತೊ ಹಾಗೆ ಬಿಟ್ಟಿದಾರೆ ಈ ಜನ, ಅಮ್ಮ ಗುರಿತಿಸಿಯೆ ಬಿಟ್ಟಳು ಅಂದುಕೊಂಡು, ಹು ಅಂದೆ.
ಅಮ್ಮ ನೀನು ಯಾರ ಮನೆಗೆ ಹೊಗ್ತಿಯಾ ನಿನ್ನ ಅತ್ತೆ ಮನೆಗೊ? ಅಮ್ಮನ ಮನೆಗೊ? ಎಂದೆ …….
ಯಾಕೋ ನಿನ್ನ ಮನೆಗೆ ಕರಕೊಂಡು ಹೊಗೋದಿಲ್ಲ ಅಂತ ಕಾಣುತ್ತೆ? ನನ್ನನ್ನ ಇವಾಗ್ಲೆ ಸಾಗಾಕುವ ಹಾಗೆ ಇದ್ದಿಯಾ?
ಅಂತ ಬಾಂಬೆ ಹಾಕಿದ್ಲು…….
ಹಂಗಲ್ಲಮ್ಮ ಎಲ್ಲಿಗ್ಗೆ ಮೊದಲು ಹೊಗ್ತಿಯಾ ಅಂತ ರೆಗಿಸಿದ್ದು ಅಷ್ಟೆ ಅಂದೆ.
ನಿನ್ನ ಮನೆ ಮೊದಲು ಮಿಕ್ಕವರ ಕಥೆ ಬಿಡು… ಅಮ್ಮ ಇಷ್ಟಗಲ ನಕ್ಕಳು, ಅವಳ ಕಣ್ಣಾಲೆಗಳಲ್ಲಿ ಮಗನ ಮನೆಗೆ ಬರುವ ಸಂತಸ ತುಂಬಿ ಬಂದಿತ್ತು…..
ನನ್ನ ಕಣ್ಣಾಲೆಗಳಲಿ ಅವಳು….